ವಿಜಯಪುರ: ಮಹೀಂದ್ರಾ ಸ್ಕಾರ್ಪಿಯೋ ಕಾರು ಹಾಗೂ ಖಾಸಗಿ ಬಸ್, ಕಂಟೇನರ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸೇರಿ ಆರು ಜನರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಬೆಳಗ್ಗೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಕಾರ್ಪಿಯೋ ಚಾಲಕ, ಕಾರಿನಲ್ಲಿದ್ದ ನಾಲ್ವರು ಹಾಗೂ ಬಸ್ ಚಾಲಕ ಮೃತಪಟ್ಟಿದ್ದಾರೆ. ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಮಲಕಂಠನ್, ಈತನ ಪತ್ನಿ ಪವಿತ್ರಾ, ಮಗ ಅಭಿರಾಮ ಮತ್ತು ಮಗಳು ಜ್ಯೋಸ್ನಾ ಮೃತರೆಂದು ಗುರುತಿಸಲಾಗಿದೆ. ಮತ್ತೊಬ್ಬ ಮಗ ಪ್ರವೀಣ ತೇಜ್ ಗಾಯಗೊಂಡಿದ್ದು, ಇವೆಲ್ಲರೂ ತೆಲಂಗಾಣ ಮೂಲದವರು ಎಂದು ಎಸ್ ಪಿ ತಿಳಿಸಿದ್ದಾರೆ. ಕಾರಿನ ಚಾಲಕ, ಹೋರ್ತಿ ಗ್ರಾಮದ ವಿಕಾಸ ಮಕನಿ ಹಾಗೂ ಬಸ್ ಚಾಲಕ, ಕಲಗುಟಗಿ ಗ್ರಾಮದ ಬಸವರಾಜ ರಾಠೋಡ್ ಸಹ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾರು ಸೋಲಾಪುರದ ಕಡೆಗೆ ಹೋಗುತ್ತಿತ್ತು ಹಾಗೂ ಬಸ್ ಮುಂಬೈನಿಂದ ಬಳ್ಳಾರಿಗೆ ಬರುತ್ತಿತ್ತು. ಈ ವೇಳೆ, ಬಸ್ಗೆ ಕಾರು ಡಿಕ್ಕಿ ಹೊಡೆದಿದೆ.ಘಟನಾ ಸ್ಥಳಕ್ಕೆ ಎಸ್ ಪಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರದಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು
2025-05-21 10:59:38- 59