ಬೆಂಗಳೂರು: ನಗರದ ಯಲಹಂಕದ ಕೋಗಿಲು ಕ್ರಾಸ್ ಬಳಿ ಮೆಟ್ರೋಗೆ ಬಳಸುವ ವಯಾಡೆಕ್ಟ್ ಬಿದ್ದು ಆಟೋ ಚಾಲಕ ಖಾಸೀಂ ಸಾಬ್ ಸಾವನ್ನಪ್ಪಿರುದ್ದಾರೆ. ಫೈನಾನ್ಸ್ನಲ್ಲಿ ಸಾಲ ಮಾಡಿ ಆಟೋ ಖರೀದಿಸಿ ಕೇಲವ 20 ದಿನದಲ್ಲೇ ದುರ್ಘಟನೆ ಸಂಭವಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತನ ಮಾವ ಸೈಯದ್ ಖಾದರ್ ದೂರು ಆಧರಿಸಿ ಲಾರಿ ಚಾಲಕ, ಎನ್ಸಿಸಿ ಕಂಪನಿ ಮ್ಯಾನೇಜರ್ ಮತ್ತು ಗುತ್ತಿಗೆದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ 12.10 ರ ಸುಮಾರಿಗೆ ಆಟೋ ಚಾಲಕ ಖಾಸೀಂ ಸಾಬ್, ಕೋಗಿಲು ಕ್ರಾಸ್ ಸಿಗ್ನಲ್ಗೆ ಬಂದಿದ್ದರು. ಈ ವೇಳೆ ಮೆಟ್ರೋ ಪಿಲ್ಲರ್ಗೆ ಅಳವಡಿಸುವ ವಯಾಡೆಕ್ಟ್ ಹೊತ್ತಿದ್ದ ಲಾರಿ ಕ್ರಾಸ್ನಲ್ಲಿ ಟರ್ನ್ ಪಡೆದುಕೊಳ್ಳುತ್ತಿತ್ತು. ಆಗ ಖಾಸಿಂ ಸಾಬ್ ಆಟೋ ಸೇರಿದಂತೆ ಅಲ್ಲಿ ಸಾಗುತ್ತಿದ್ದ ವಾಹನಗಳೆಲ್ಲಾ ನಿಂತುಕೊಂಡಿದ್ದವು. ಅದೇ ಹೊತ್ತಲ್ಲೇ 18 ಚಕ್ರದ ಲಾರಿ ನೋಡ ನೋಡ್ತಿದ್ದಂತೆ ಪಲ್ಟಿ ಹೊಡೆದಿತ್ತು. 80 ಅಡಿ ಉದ್ದದ ವಯಾಡೆಕ್ಟ್ ಆಟೋ ಮೇಲೆ ಉರುಳಿ ಬಿದ್ದಿತ್ತು. ಹತ್ತಾರು ಟನ್ ತೂಕದ ವಯಾಡೆಕ್ಟ್ ಬಿದ್ದಿದ್ರಿಂದ ಹೊಸ ಆಟೋ ಅಪ್ಪಚ್ಚಿಯಾದರೆ ಚಾಲಕ ಕೂಡ ಪ್ರಾಣ ಬಿಟ್ಟಿದ್ದ.
ಆಟೋ ಚಾಲಕನ ಸಾವಿಗೆ ಬಿಎಂಆರ್ಸಿಎಲ್ನ ನಿರ್ಲಕ್ಷ್ಯವೇ ಕಾರಣ. ಇಂಥಾ ಬೃಹತ್ ವಸ್ತುಗಳನ್ನ ಸಾಗಿಸುವಾಗ ಹಿಂದೆ ಮುಂದೆ ಗಾರ್ಡ್ಗಳು ಇರಬೇಕು. ಆದರೆ ನಿನ್ನೆ ಲಾರಿ ಚಾಲಕನನ್ನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಘಟನೆ ಬಗ್ಗೆ ಬಿಎಂಆರ್ಸಿಎಲ್ ಟ್ವೀಟ್ ಮಾಡುವ ಮೂಲಕ ವಿಷಾದ ವ್ಯಕ್ತಪಡಿಸಿದೆ.