ಹಾವೇರಿ: ಕರ್ತವ್ಯದ ವೇಳೆ ಮಾರ್ಗಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತು ಮಾಡಲಾಗಿದೆ. ಹಾನಗಲ್ ಘಟಕದ ಚಾಲಕ ಎ.ಆರ್.ಮುಲ್ಲಾ ಕಾರ್ಯನಿರತ ವೇಳೆ ರಸ್ತೆ ಪಕ್ಕ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ತವ್ಯಲೋಪ ಆರೋಪದಲ್ಲಿ ಚಾಲಕ ಎ.ಆರ್.ಮುಲ್ಲಾನನ್ನು ಅಮಾನತುಗೊಳಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿ ಇಂದು ಆದೇಶ ಹೊರಡಿಸಿದ್ದಾರೆ. ವಿಚಾರಣೆ ಮುಗಿಯುವವರೆಗೂ ಅಮಾನತು ಮಾಡಿ ಆದೇಶಿಸಿದ್ದು, ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ. ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿ ನಡುವಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ನ ಚಾಲಕ ಕಂ ನಿರ್ವಾಹಕ ಮುಲ್ಲಾ ಮಾರ್ಗಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದರು. ನಮಾಜ್ ಮಾಡುತ್ತಿರುವ ವಿಡಿಯೋವನ್ನು ಪ್ರಯಾಣಿಕನೋರ್ವ ಸೆರೆಹಿಡಿದಿದ್ದ, ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಡ್ರೈವರ್ ಮುಲ್ಲಾ ನಡೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇನ್ನು ಈ ವಿಚರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಏ.29ರಂದು ಹುಬ್ಬಳ್ಳಿಯಿಂದ ಹಾವೇರಿ ನಡುವಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ನ ಚಾಲಕ ಕಂ ನಿರ್ವಾಹಕ ಮಾರ್ಗಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿರುವ ಕುರಿತು ವರದಿಯಾಗಿದೆ. ಪ್ರತಿ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿದೆ. ಆದರೆ, ಸಾರ್ವಜನಿಕ ಸೇವೆಯಲ್ಲಿರುವವರು ಕರ್ತವ್ಯ ವೇಳೆ ಹೊರತುಪಡಿಸಿ ತಮ್ಮ ಧರ್ಮವನ್ನು ಪಾಲಿಸಬಹುದಾಗಿದೆ. ಹೀಗಾಗಿ ಕರ್ತವ್ಯದ ಸಮಯದಲ್ಲಿ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಆಕ್ಷೇಪಾರ್ಹ. ಈ ವಿಡಿಯೋಗೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ, ಸಿಬ್ಬಂದಿ ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಮಲಿಂಗಾರೆಡ್ಡಿ ಆದೇಶಿಸಿದ್ದರು. ಅಲ್ಲದೆ, ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದೂ ಸೂಚಿಸಿದ್ದರು.
ಕರ್ತವ್ಯದ ವೇಳೆ ಬಸ್ನಲ್ಲಿ ನಮಾಜ್ ವಿಡಿಯೋ ವೈರಲ್ - ಬಸ್ ಚಾಲಕ ಅಮಾನತು!
2025-05-01 16:38:18- 70