ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ಮೇ.07 ರ ತಡರಾತ್ರಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಹೆಸರಿನಲ್ಲಿ ದಾಳಿ ಮಾಡಿತು. ಈ ದಾಳಿಯಲ್ಲಿ ಹತರಾಗಿರುವ ಐವರು ಉಗ್ರಗಾಮಿಗಳ ಹೆಸರುಗಳು ಇದೀಗ ಬಹಿರಂಗಗೊಂಡಿವೆ. ಐವರು ಭಯೋತ್ಪಾದಕರನ್ನು ಮುದಸ್ಸರ್ ಖಡಿಯನ್ ಖಾಸ್, ಹಫೀಜ್ ಮುಹಮ್ಮದ್ ಜಮೀಲ್, ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ ಅಲಿಯಾಸ್ ಅಬು ಮತ್ತು ಮೊಹಮ್ಮದ್ ಹಸನ್ ಖಾನ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳು ಭಾಗವಹಿಸಿದ್ದ ಫೋಟೋಗಳು ವೈರಲ್ ಆಗಿವೆ. ಮುದಾಸರ್ ಮತ್ತು ಅಬು ಜುಂದಾಲ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಖಾಸ್, ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿದ್ದನು. ಭಾರತದ ಗಡಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಮುರಿಡೈಯಲ್ಲಿರುವ ಮರ್ಕಜ್ ತೈಬಾ ಎಂಬ ಭಯೋತ್ಪಾದಕ ಶಿಬಿರದ ಉಸ್ತುವಾರಿಯನ್ನು ಅವನು ವಹಿಸಿಕೊಂಡಿದ್ದನು. ಇದು ಎಲ್ಇಟಿಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. 2008 ರ ಮುಂಬೈ ದಾಳಿಯ ಸಮಯದಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಅಜ್ವಲ್ ಕಸಬ್, ಈ ಶಿಬಿರದಲ್ಲಿ ತರಬೇತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದ. ಈ ಘಟನೆಯ ಮಾಸ್ಟರ್ ಮೈಂಡ್, ಮತ್ತೊಬ್ಬ ಭಯೋತ್ಪಾದಕ ಡೇವಿಡ್ ಹೆಡ್ಲಿ ಕೂಡ ಇಲ್ಲಿ ತರಬೇತಿ ಪಡೆದಿದ್ದಾನೆ ಎಂದು ವರದಿಯಾಗಿದೆ. ಮತ್ತೊಬ್ಬ ಉಗ್ರ ಹಫೀಜ್ ಮುಹಮ್ಮದ್ ಜಮೀಲ್ ಆಪರೇಷನ್ ಸಿಂದೂರ್ ನಲ್ಲಿ ಹತನಾಗಿದ್ದಾನೆ. ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿರುವ ಈತ ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸೋದರ ಮಾವ. ಉಸ್ತಾದ್ ಜಿ ಅಲಿಯಾಸ್ ಮೊಹಮ್ಮದ್ ಸಲೀಂ ಅಲಿಯಾಸ್ ಘೋಸಿ ಸಹಾಬ್ ಎಂದು ಕರೆಯಲ್ಪಡುವ ಮೊಹಮ್ಮದ್ ಯೂಸುಫ್ ಅಜರ್ ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದ. ಈತ ಮೌಲಾನಾ ಮಸೂದ್ ಅಜರ್ ನ ಸೋದರ ಮಾವ. ಈತನೂ IC-814 ವಿಮಾನ ಅಪಹರಣ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಮತ್ತೊಬ್ಬ ಉಗ್ರ ಮೊಹಮ್ಮದ್ ಹಸನ್ ಖಾನ್. ಜೈಶ್-ಎ-ಮೊಹಮ್ಮದ್ ಉಗ್ರನೀತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಪ್ತಿ ಅಸ್ಕರ್ ಖಾನ್ ಕಾಶ್ಮೀರಿಯ ಪುತ್ರನೀತ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಭಾರತ ಸೇನೆ ನಡೆಸಿದ ಆಪರೇಷನ್ ಸಿಂದೂರ್ ದಾಳಿಯಲ್ಲಿ ಪಾಕ್ನ ಐವರು ಉಗ್ರರು ಬಲಿ
2025-05-10 15:32:31- 64