ಹುಬ್ಬಳ್ಳಿ: ಪಹಲ್ಲಾಮ್ ದಾಳಿ ನಂತರದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಭಾರತ ತೀವ್ರಗೊಳಿಸಿದ್ದು, ಉಗ್ರರ ದಮನ ನಿಟ್ಟಿನಲ್ಲಿ ತೀಕ್ಷ್ಣ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ಅಡಗುತಾಣ, ತರಬೇತಿ ಕೇಂದ್ರ, ವಸತಿಗಳನ್ನು ನಮ್ಮ ಸೈನಿಕರು ನಾಶ ಮಾಡಿದ್ದಾರೆ. ರಾಜಕೀಯ ಇಚ್ಛಾಶಕ್ತಿ, ಧೈರ್ಯ, ಬದ್ದ ನಾಯಕತ್ವದ ಕಾರಣಕ್ಕೆ ಭಾರತ ಉಗ್ರರು ಹಾಗೂ ಪಾಕ್ ಗೆ ತಕ್ಕ ಉತ್ತರ ನೀಡಲು ಸಾಧ್ಯವಾಗಿದೆ ಎಂದರು. ಭಯೋತ್ಪಾದನೆಗೆ ಪಾಕ್ ನ ಸಹಕಾರ ಎಷ್ಟಿದೆ ಎಂದರೆ ಉಗ್ರರು ನಮ್ಮ ದಾಳಿಯಲ್ಲಿ ಸತ್ತಾಗ ಅಂತ್ಯಕ್ರಿಯೆಗೆ ಪಾಕ್ ಸೇನಾಧಿಕಾರಿಗಳು, ರಾಜಕಾರಣಿಗಳು ಭಾಗವಹಿಸಿದ್ದು ನೋಡಿದರೆ, ಪಾಕ್-ಭಯೋತ್ಪಾದನೆ ಒಟ್ಟಿಗೆ ಇವೆ ಎಂದೆನಿಸದೆ ಇರದು ಎಂದರು. ಸೈನಿಕರ ಮನೋಬಲ ಹೆಚ್ಚಿಸಲು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಭಯೋತ್ಪಾದಕ ಕೃತ್ಯಗಳು, ಹಿಂದೆ ನಡೆದ ಘಟನೆಗಳ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದೊಡ್ಡವ ಎಂಬ ಭ್ರಮೆಯಲ್ಲಿ ಇದ್ದಾರೆ. ಆ ರೋಗದಿಂದ ಬಳಲುತ್ತಿದ್ದಾರೆ. ಮೋದಿಯವರನ್ನು ಟೀಕಿಸಿದರೆ, ತಾವು ದೊಡ್ಡವರಾಗುತ್ತೇವೆ ಎಂಬ ಭ್ರಮೆ ಸಚಿವ ಸಂತೋಷ ಲಾಡ್ ರನ್ನು ಆವರಿಸಿದೆ ಎಂದು ಟೀಕೆ ಮಾಡಿದರು.
ಪಹಲ್ಲಾಮ್ ದಾಳಿ ನಂತರ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ಭಾರತ ತೀವ್ರಗೊಳಿಸಿದೆ- ಜೋಶಿ
2025-05-16 17:18:39- 64