ಆದಂಪುರ: ಆಪರೇಷನ್ ಸಿಂದೂರ್ ಯಶಸ್ಸಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಪಂಜಾಬ್ ನ ಆದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಮಾತನಾಡಿದ್ದು, ಕೇವಲ ಉಗ್ರರಿಗೆ ಮಾತ್ರವಲ್ಲದೆ, ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದಕರು ಯಾವ ಪಾಕಿಸ್ತಾನಿ ಸೈನ್ಯವನ್ನು ಅವಲಂಬಿಸಿದ್ದರೋ, ಆ ಪಾಕಿಸ್ತಾನಿ ಸೈನ್ಯವನ್ನು ಭಾರತೀಯ ಸೈನ್ಯ, ಭಾರತೀಯ ವಾಯುಪಡೆ ಮತ್ತು ಭಾರತೀಯರು ನೆಲ ಕಚ್ಚುವಂತೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ. ಭಾರತೀಯ ಸೈನ್ಯವನ್ನು ಈ ವೇಳೆ ಪ್ರಶಂಸಿಸಿದ ಪ್ರಧಾನಿ ಮೋದಿ, ಉಗ್ರರು ಇನ್ನು ನಿರಾತಂಕವಾಗಿ ಉಸಿರಾಡಲೂ ಪಾಕಿಸ್ತಾನದಲ್ಲಿ ಯಾವುದೇ ಜಾಗ ಇರದಂತೆ ನಮ್ಮ ಸೇನೆ ಮಾಡಿದೆ ಎಂದರು. ಗಡಿಯಾಚೆಗಿನ ಉಗ್ರವಾದದ ವಿರುದ್ಧದ ಭಾರತದ ಹೊಸನೀತಿಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ನಾವು ಅವರ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ, ಅಲ್ಲದೆ ಅವರಿಗೆ ಅಡಗಿಕೊಳ್ಳಲು ಯಾವುದೇ ಅವಕಾಶವನ್ನೂ ನೀಡುವುದಿಲ್ಲ ಎಂದು ಗುಡುಗಿದರು. ಭಾರತದ ಮಿಲಿಟರಿ ಸಾಮರ್ಥ್ಯದ ಬಗ್ಗೆ ಮತ್ತೆ ಎಚ್ಚರಿಕೆ ನೀಡಿದ ಮೋದಿ, ನಮ್ಮ ಡ್ರೋನ್ಗಳು , ನಮ್ಮ ಕ್ಷಿಪಣಿಗಳ ಬಗ್ಗೆ ಯೋಚನೆ ಮಾಡಿದರೆ ಪಾಕಿಸ್ತಾನವು ಕೆಲವು ದಿನಗಳವರೆಗೆ ನಿದ್ದೆಗೆಡುತ್ತದೆ ಎಂದು ಹೇಳಿದರು. ಉಗ್ರವಾದದ ವಿರುದ್ಧದ ಭಾರತದ ಲಕ್ಷ್ಮಣ ರೇಖೆಯು ಇದೀಗ ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ಇನ್ನುಂದೆ ಒಂದೇ ಒಂದು ಉಗ್ರಕೃತ್ಯ ನಡೆದರೆ ಭಾರತ ತಿರುಗೇಟು ನೀಡುತ್ತದೆ-ಪ್ರಬಲ ತಿರುಗೇಟು ನೀಡುತ್ತದೆ. ನಾವು ಇದನ್ನು ಈ ಹಿಂದೆ ಸರ್ಜಿಕಲ್ ಸ್ಟೈಕ್ ನಲ್ಲಿ ನೋಡಿದ್ದೇವೆ, ಏರ್ ಸ್ಟೈಕ್ ನಲ್ಲಿ ನೋಡಿದ್ದೇವೆ. ಈಗ ಆಪರೇಷನ್ ಸಿಂದೂರ್ ಭಾರತದ ನ್ಯೂ ನಾರ್ಮಲ್ ಎಂದರು. ಆಪರೇಷನ್ ಸಿಂದೂರ್ ಸಾಮಾನ್ಯ ಮಿಲಿಟರಿ ಕಾರ್ಯಾಚರಣೆಯಲ್ಲ. ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಣಾಯಕತೆಯ ಸಂಗಮ. ಭಾರತ ಬುದ್ಧ ಮತ್ತು ಗುರು ಗೋವಿಂದ ಸಿಂಗ್ ಜೀ ಅವರ ಭೂಮಿ... ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂದೂರವನ್ನು ತೆಗೆದುಹಾಕಿದರೋ, ಆಗ ನಾವು ಭಯೋತ್ಪಾದಕರ ಮನೆಗಳಿಗೆ ನುಗ್ಗಿ ಅವರನ್ನು ಹತ್ತಿಕ್ಕಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ಸೇನೆ ಪಾಕ್ಗೆ ತಕ್ಕ ಪಾಠ ಕಲಿಸಿದೆ- ಪ್ರಧಾನಿ ಮೋದಿ
2025-05-13 16:56:02- 68