ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ತಲೆ ಇಲ್ಲದ ಫೋಟೋ ಹಾಕಿ ಗಾಯಬ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾವುದೇ ವ್ಯಕ್ತಿಗೆ, ಯಾರೇ ಇರಲಿ, ಅದು ಪ್ರಧಾನಮಂತ್ರಿಯೇ ಇರಲಿ, ಯಾವುದೇ ಮುಖಂಡರಿಗೇ ಇರಲಿ, ಅವರ ಗೌರವಕ್ಕೆ ಧಕ್ಕೆ ತರುವಂತ ಕೆಲಸ ಮಾಡಬಾರದು. ಅವರಾಗಲಿ ನಮ್ಮವರೇ ಆಗಲಿ ಈ ರೀತಿ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ. ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಕೈ ನಾಯಕರಿಗೆ ಸೂಚನೆ ವಿಚಾರವಾಗಿ ಮಾತನಾಡಿದ ಅವರು, ಅದರ ಸುತ್ತೋಲೆ ಹೊರಡಿಸಿದ್ದೇವೆ. ದೆಹಲಿಯಲ್ಲಿ ವರ್ಕಿಂಗ್ ಕಮಿಟಿ ಸಭೆ ಮಾಡಿದ್ದೆವು. ವರ್ಕಿಂಗ್ ಕಮಿಟಿಯಲ್ಲಿ ನಿರ್ಣಯ ತೆಗೆದುಕೊಂಡಿದ್ದೆವು. ಆ ನಿರ್ಣಯವನ್ನ ಎಲ್ಲರೂ ಪಾಲಿಸಬೇಕು. ಇದನ್ನ ಮತ್ತೊಮ್ಮೆ ಅವರಿಗೆ ಮನವರಿಕೆ ಮಾಡಿದ್ದೇವೆ. ಎಲ್ಲರೂ ಅದನ್ನು ಫಾಲೋ ಮಾಡಬೇಕು ಎಂದು ಸೂಚನೆ ನೀಡಿದರು. ಇನ್ನು ನಾವು ಎಲ್ಲಾ ಪಕ್ಷದವರು ಒಂದಾಗಿ ಅಧಿವೇಶನ ಕರೆಯಬೇಕು ಎಂದು ಹೇಳಿದ್ದೇವೆ. ಪ್ರಧಾನ ಮಂತ್ರಿಗಳು ಅಧಿವೇಶನದಲ್ಲಿ ಇರಬೇಕು. ಪ್ರಧಾನಮಂತ್ರಿಗಳು ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಅದನ್ನು ಹೇಳಬೇಕು. ಕೆಲವೊಂದು ಗುಪ್ತ ಕಾರ್ಯಸೂಚಿಗಳಿರುತ್ತದೆ, ಅದನ್ನು ಮಾಡಲಿ. ಇವತ್ತಿನ ಪರಿಸ್ಥಿತಿ ಏನಿದೆ, ಅವರು ಏನು ಮಾಡಬೇಕು ಎಂಬುದು ಮನಸ್ಸಿನಲ್ಲಿದೆ. ಅದನ್ನು ಫ್ಲೋರ್ ಲೀಡರ್ಸ್ನ ಕರೆದು ಮಾತನಾಡಿಸುವುದು ಒಳ್ಳೆಯದು ಎಂದು ಹೇಳಿದರು. ಯಾವುದೇ ರೀತಿಯಲ್ಲಿ ಭಾರತ ದೇಶದ ಸೈನಿಕರಿಗಾಗಲಿ, ಜನರಿಗಾಗಲಿ ತೊಂದರೆ ಆಗಬಾರದು. ಪಾಕಿಸ್ತಾನವನ್ನ ಹತೋಟಿಯಲ್ಲಿ ಇಡಲು ನಾವು ಪ್ರಧಾನಿಗೆ ಬೆಂಬಲ ಕೊಟ್ಟಿದ್ದೇವೆ. ಈಗಾಗಲೇ ನಾವು ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಜನರ ಅನಿಸಿಕೆ ಹಾಗೂ ದೇಶದಲ್ಲಿ ಇರುವ ಭಾವನೆ ಜೊತೆಗೆ ಎಲ್ಲಾ ಪಕ್ಷಗಳು ಅವರಿಗೆ ಅಧಿಕಾರ ನೀಡಿದ್ದೇವೆ. ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಅಧಿಕಾರ ಮಾಡಲು ಕೊಟ್ಟಿದ್ದೇವೆ. ಅದನ್ನು ಅವರು ಉಪಯೋಗ ಮಾಡಿಕೊಳ್ಳಲಿ, ತಮ್ಮ ಕೆಲಸವನ್ನು ಅವರು ಮಾಡಲಿ. ದೇಶದ ರಕ್ಷಣೆ ಮಾಡುವುದಕ್ಕೆ ಆದಷ್ಟು ಬೇಗನೆ ಒಳ್ಳೆಯ ಹೆಜ್ಜೆಯನ್ನು ಇಡಬೇಕು ಎಂದರು.
ಮೋದಿ ತಲೆ ಇಲ್ಲದ ಫೋಟೋ ಹಂಚಿಕೊಂಡ ಕಾಂಗ್ರೆಸ್ ಟ್ವೀಟ್ಗೆ ಖರ್ಗೆ ಬೇಸರ
2025-04-30 16:27:51- 72