ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲಾಯಿತು. ಅವರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸುವಾಗ ಅವರ ಪತ್ನಿ ಹಿಮಾಂಶಿ ನರ್ವಾಲ್ ಕಣ್ಣೀರು ಹಾಕುತ್ತಾ, ಭಾವುಕ ವಿದಾಯ ನೀಡಿದ್ದಾರೆ. ವಿನಯ್ ಬಹಳ ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಮುಕ್ತಿ ಸಿಗಲಿ. ಅವರ ಬಗ್ಗೆ ಪ್ರತಿದಿನವೂ ನಾವು ಹೆಮ್ಮೆ ಪಡುತ್ತೇವೆ ಎಂದು ಹಿಮಾಂಶಿ ಭಾವುಕರಾಗಿ ಪತಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ನಿನ್ನೆ ಪಹಲ್ಗಾಮ್ನ ಹುಲ್ಲುಹಾಸಿನ ಮೇಲೆ ತನ್ನ ಪತಿಯ ಶವದೆದುರು ಕುಳಿತು ಅಸಹಾಯಕಳಾಗಿ ನೋಡುತ್ತಿದ್ದ ಹಿಮಾಂಶಿ ಅವರ ಫೋಟೋ ವೈರಲ್ ಆಗಿತ್ತು. ಈ ದೃಶ್ಯ ಉಗ್ರರ ಅಟ್ಟಹಾಸಕ್ಕೆ ನಿದರ್ಶನದಂತಿತ್ತು. ವಿನಯ್ ನರ್ವಾಲ್ ಕೇವಲ ಎರಡು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದ್ದರು ಮತ್ತು ಕೊಚ್ಚಿಯಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಕೇವಲ 1 ವಾರದ ಹಿಂದಷ್ಟೇ ಮದುವೆಯಾಗಿದ್ದ 26 ವರ್ಷದ ಹರಿಯಾಣದ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ತಮ್ಮ ಪತ್ನಿಯ ಜೊತೆ ಕಾಶ್ಮೀರಕ್ಕೆ ಹನಿಮೂನಿಗೆ ಹೋಗಿದ್ದಾಗ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಲೆಫ್ಟಿನೆಂಟ್ ವಿನಯ್ ಗೆ ಪತ್ನಿ ಹಿಮಾಂಶಿ ಬಾವುಕ ನಮನ
2025-04-23 17:46:09- 6