ಬೆಂಗಳೂರು: ಬಿಸಿಲು, ಬಿಸಿ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ಕೊಟ್ಟಿದೆ. ರಾಜ್ಯದ ಹಲವೆಡೆ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಸಿಲಿಕಾನ್ ಸಿಟಿ ಮಂದಿ ಸೋಮವಾರ ಮಳೆರಾಯ ತಂಪೆರೆದಿದ್ದಾನೆ. ನಿನ್ನೆ ನಗರದ ಹಲವಾರು ಕಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬನಶಂಕರಿ, ಜಯನಗರ, ಬಸವನಗುಡಿ, ಜೆಪಿ ನಗರ, ಕನಕಪುರ ರಸ್ತೆ, ಸಾರಕ್ಕಿ, ವಿಜಯನಗರ, ಚಂದ್ರಾ ಲೇಔಟ್, ಮಾಗಡಿ ರಸ್ತೆ, ದೀಪಾಂಜಲಿ ನಗರ, ಮೈಸೂರು ರಸ್ತೆ, ನಾಗರಬಾವಿ, ಮೂಡಲಪಾಳ್ಯ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್ಆರ್ ನಗರ ಸೇರಿದಂತೆ ರಾಜಧಾನಿಯ ಹಲವೆಡೆ ವರುಣನ ಸಿಂಚನವಾಗಿದೆ.
ಇನ್ನೂ ಮೇ 13 ರಿಂದ 19ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು ಮೇ 15ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೇ 14ರಂದು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಹಾಗೂ ಮೇ 15ರಂದು ವಿಜಯಪುರ, ಬೆಳಗಾವಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮೇ 13ರಿಂದ 19ರವರೆಗೆ ಮಳೆಯಾಗಲಿದ್ದು, ಮೊದಲ 2 ದಿನ ಹೊರತು ಪಡಿಸಿ ಉಳಿದ ಎಲ್ಲಾ ದಿನ ವ್ಯಾಪಕ ಮಳೆಯಾಗಲಿದೆ. ಮೇ 13ರಂದು ಚಿತ್ರದುರ್ಗ, ಹಾಸನ, ಕೊಡಗು. ಮೈಸೂರು ಹಾಗೂ ಮೇ 14ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಹವಾಮಾನ ಇಲಾಖೆಯಿಂದ ರಾಜ್ಯದ ಹಲವೆಡೆ ಒಂದು ವಾರ ಮಳೆಯಾಗುವ ಎಚ್ಚರಿಕೆ
2025-05-13 10:58:54- 47