ನವದೆಹಲಿ: ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಸಂಬಂಧ ಇಂದು ಸಂಜೆ 6 ಗಂಟೆಗೆ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಪಹಲ್ಗಾಮ್ ದಾಳಿಗೆ ಪ್ರತಿ ದಾಳಿಯ ಬಗ್ಗೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಉಪಸಮಿತಿಯು ಭದ್ರತೆ ಕುರಿತು ಮಹತ್ವದ ಸಭೆ ಇಂದು ಸಂಜೆ ನಡೆಯಲಿದೆ. ಈ ಸಭೆಯಲ್ಲಿ ಗಡಿ ಭದ್ರತೆಗೆ ಧಕ್ಕೆ ತಂದ ಈ ಸನ್ನಿವೇಶದಿಂದ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚೆ ಮಾಡಲಾಗುತ್ತದೆ. ದೇಶದ ಭದ್ರತೆಗೆ ಸಂಬಂಧಿಸಿದ ಉನ್ನತ ತೀರ್ಮಾನಗಳನ್ನು ಇದರಲ್ಲಿ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳನ್ನು ಜಾರಿಗೆ ತರುವವರೆಗೂ ಕೇಂದ್ರ ಸರ್ಕಾರ ರಹಸ್ಯ ಕಾಪಾಡಿಕೊಳ್ಳಲಿದೆ ಎಂದು ಹೇಳಲಾಗಿದೆ. ಇಂದು ನಡೆಯುವ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ರಹಸ್ಯವಾಗಿ ಜಾರಿ ಮಾಡಲಾಗುತ್ತದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರದ ಕ್ಯಾಬಿನೆಟ್ನ ಭದ್ರತೆಯ ಉಪಸಮಿತಿ ಸಭೆ ನಡೆಸಲಿದೆ. ಉಗ್ರರ ಲಾಂಚ್ ಪ್ಯಾಡ್ಗಳನ್ನು ನಾಶಪಡಿಸುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಭಾರತದ ಗಡಿ ಆಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಲಾಂಚ್ ಪ್ಯಾಡ್ಗಳನ್ನು ಧ್ವಂಸ ಮಾಡಲು ನಿರ್ಧಾರ ತೆಗೆದುಕೊಳ್ಳುತ್ತಾರೆ. ಗಡಿ ಆಚೆ ಇರುವ 42 ಲಾಂಚ್ಪ್ಯಾಡ್ಗಳಲ್ಲಿ 110 ರಿಂದ 130 ಭಯೋತ್ಪಾದಕರು ಇದ್ದಾರೆ. 60 ರಿಂದ 65 ಭಯೋತ್ಪಾದಕರು ಜಮ್ಮು, ರಾಜೋರಿ, ಪೂಂಚ್ ಭಾಗದಲ್ಲಿದ್ದಾರೆ ಎನ್ನುವ ಮಾಹಿತಿ ಸರ್ಕಾರಕ್ಕೆ ಇದೆ.
ಪಹಲ್ಗಾಮ್ ಉಗ್ರರ ದಾಳಿ- ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ
2025-04-23 16:07:49- 8