ಕೊಪ್ಪಳ: ನಾನು ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದಿಲ್ಲ. ದೇಶ ರಕ್ಷಣೆ ಬಂದಾಗ ಸುಮ್ಮನೆ ಇರಲಾಗದು. ಅಗತ್ಯವಿದ್ದರೆ ಮಾತ್ರ ಯುದ್ಧ ಮಾಡಿ ಎಂದಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಅವರು, ಉಗ್ರರಿಗೆ ನೆಲೆ ಕೊಟ್ಟಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ಸಿಕ್ಕಿತ್ತು. ನಮ್ಮ ಸಾರ್ವಭೌಮತ್ವ ಉಳಿಸಲು ಯುದ್ಧ ಮಾಡಲೇಬೇಕಾದ ಅನಿವಾರ್ಯ ಇದ್ದರೆ, ಮಾಡಲೇಬೇಕು. ನಮ್ಮ ಸೈನ್ಯ ಪಾಕಿಸ್ತಾನದ ಮೇಲೆ ದಾಳಿ ಮಾಡಿದಾಗ ಇಡಿ ದೇಶ ಒಗ್ಗಟ್ಟಾಗುವ ಕೆಲಸ ಮಾಡುತ್ತದೆ ಎಂದಿದ್ದೆ, ಅದನ್ನೆಲ್ಲ ಕತ್ತರಿಸಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಆಪರೇಷನ್ ಸಿಂಧೂರ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ, ಕಾಂಗ್ರೆಸ್, ಬಿಜೆಪಿ ಶಾಸಕರು, ಸೈನಿಕ ಅಧಿಕಾರಿಗಳು, ಪ್ರಧಾನ ಮಂತ್ರಿಗಳು ಹಾಗೂ ವಿದೇಶಾಂಗ ಸಚಿವರು ಅವರವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದ್ರೆ ಟ್ರಂಪ್ ಅವರು ಮೊದಲು ಹೇಳಿದ್ದು ಬೇರೆ, ಈಗ ಮತ್ತೆ ಬೇರೆ ಹೇಳಿಕೆ ಕೊಡುತ್ತಿದ್ದಾರೆ. ಯಾವ ಹೇಳಿಕೆ ಅಧಿಕೃತ ಎಂದು ಗೊತ್ತಾಗ್ತಾ ಇಲ್ಲ. ನನ್ನ ಪ್ರಕಾರ ಟ್ರಂಪ್, ಮೊದಲು ಹೇಳಿರೋದು ಸರಿಯಾಗಿದೆ ಎಂದು ಅನಿಸುತ್ತದೆ ಎಂದಿದ್ದಾರೆ.
ಇದೇ ವೇಳೆ ಗ್ರೇಟರ್ ಬೆಂಗಳೂರು ಅಲ್ಲ ಕ್ವಾಟರ್ ಬೆಂಗಳೂರು ಎಂಬ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಅವರಿಗೆ ಕ್ವಾಟರ್ ನೆನಪಿದೆ. ಅವರಿಗೆ ಕ್ವಾಟರ್ ಮಾತ್ರ ಗೊತ್ತಿದೆ ಹಾಗಾಗಿ ಹೇಳಿದ್ದಾರೆ. ಬೆಂಗಳೂರು ಮೂರು ವಿಭಾಗ ಮಾಡಬೇಕು ಎಂದು ಯೋಜನೆ ಮಾಡಿದ್ದೇ ಬಿಜೆಪಿ. ನಾನು ಸಿಎಂ ಆದ ಮೇಲೆ 1.50 ಕೋಟಿ ಜನರನ್ನು ಪಾಲಿಕೆ ನಿರ್ವಹಣೆ ಮಾಡುವುದು ಕಷ್ಟ. ಗ್ರೇಟರ್ ಬೆಂಗಳೂರು ಇರುತ್ತದೆ. ಆಡಳಿತಾತ್ಮಕವಾಗಿ ಬೆಂಗಳೂರನ್ನು ಮೂರು ಕಾರ್ಪೋರೇಷನ್ ಮಾಡಲು ಬಿ.ಎಸ್.ಪಾಟೀಲ್ ಹಾಗೂ ಸಿದ್ದಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದೆ. ಈ ಸಾರಿ ಮತ್ತೆ ಅಧಿಕಾರಕ್ಕೆ ಬಂದಿದ್ದು ಅದು ಮುಂದುವರೆಯಲಿದೆ ಎಂದರು.