2025ರ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆ ಮೂಡಿತ್ತು. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಜತ್ ಪಾಟಿದಾರ್ ಅವರು ಕ್ಯಾಪ್ಟನ್ ಆಗಿದ್ದಾರೆ. ಬಹುತೇಕರು ವಿರಾಟ್ ಕೊಹ್ಲಿ ನಾಯಕನಾಗಬಹುದು ಎಂದು ಊಹಿಸಿದ್ದರು. ಆದರೆ, ಅದು ಸುಳ್ಳಾಗಿದೆ. ವಿರಾಟ್ಗೆ ನಾಯಕತ್ವ ಏಕೆ ನೀಡಿಲ್ಲ ಎಂಬ ಬಗ್ಗೆ ಆರ್ಸಿಬಿ ಸ್ಪಷ್ಟನೆ ಕೊಟ್ಟಿದೆ.
ಭಾರತೀಯ ಆಟಗಾರನಿಗೆ ನಾಯಕತ್ವ ಕೊಡಬೇಕು ಎಂಬುದು ಆರ್ಸಿಬಿ ಆಲೋಚನೆ ಆಗಿತ್ತು. ವಿರಾಟ್ ಅವರು ಕೂಡ ಲಿಸ್ಟ್ನಲ್ಲಿ ಇದ್ದರು. ಇತ್ತೀಚೆಗೆ ವಿರಾಟ್, ಆರ್ಸಿಬಿ ವ್ಯವಹಾರಗಳ ನಿರ್ದೇಶಕ ಮೊ ಬೊಬಾಟ್ ಹಾಗೂ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಒಟ್ಟಾಗಿ ಸಭೆ ನಡೆಸಿದ್ದರು. ಈ ವೇಳೆ ರಜತ್ ಅವರ ಹೆಸರು ಫೈನಲ್ ಆಗಿದೆ.
‘ಭಾರತದ ಆಟಗಾರರನ್ನು ನಾಯಕನನ್ನಾಗಿ ಮಾಡಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಇದು ಭಾರತೀಯ ಲೀಗ್ ಆಗಿರುವುದರಿಂದ, ಸ್ಥಳೀಯ ವಿಚಾರಗಳ ಬಗ್ಗೆ ಹೆಚ್ಚು ಮಾಹಿತಿ ಇರುವ ಭಾರತೀಯ ಆಟಗಾರನಿಗೆ ನಾವು ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಿದ್ದೆವು’ ಎಂದು ಬೊಬಾಟ್ ಹೇಳಿದ್ದಾರೆ.
‘ವಿರಾಟ್ ಅವರ ಹೆಸರೂ ಲಿಸ್ಟ್ನಲ್ಲಿ ಇತ್ತು. ವಿರಾಟ್ ಅವರಿಗೆ ತಂಡವನ್ನು ಮುನ್ನಡೆಸಲು ನಾಯಕತ್ವವೇ ಬೇಕಾಗಿಲ್ಲ. ಕಳೆದ ಬಾರಿ ಫಾಪ್ ಡುಪ್ಲೆಸಿಸ್ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಕೊಹ್ಲಿ ಹಿಂದಿನಿಂದ ತಂಡವನ್ನು ಮುನ್ನಡೆಸುತ್ತಿದ್ದರು. ರಜತ್ ಅವರ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಅವರು ಹಿಂದಿನ ಸೀಸನ್ನಲ್ಲಿ ಉತ್ತಮವಾಗಿ ಆಡಿದ್ದಾರೆ’ ಎಂದು ಬೊಬಾಟ್ ಹೇಳಿದ್ದಾರೆ.
ಕ್ಯಾಪ್ಟನ್ ಹೌದೋ ಅಥವಾ ಅಲ್ಲವೋ ಕೊಹ್ಲಿ ಯಾವಾಗಲೂ ತಂಡದ ನಾಯಕನಾಗಿರುತ್ತಾರೆ. ಈಗಾಗಲೇ ಅವರು ಪಾಟಿದಾರ್ಗೆ ಬೆಂಬಲ ನೀಡುವಂತೆ ಕೋರಿದ್ದಾರೆ. ಫಾಪ್ ಕ್ಯಾಪ್ಟನ್ ಆಗುವುದಕ್ಕೂ ಮೊದಲು ಕೊಹ್ಲಿ ಅವರೇ ಸ್ವತಃ ನಾಯಕತ್ವದಿಂದ ಹಿಂದೆ ಸರಿದಿದ್ದರು. ಆ ಬಳಿಕ ಫಾಪ್ ಅವರು ನಾಯಕತ್ವ ಪಡೆದುಕೊಂಡಿದ್ದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಮಹಾಭಾರತದ ಹೋಲಿಕೆ ಮಾಡಲಾಗಿದೆ. ಕೊಹ್ಲಿ ಅವರು ಕೃಷ್ಣನಂತೆ ಮುಂದಿದ್ದರೆ, ರಜತ್ ಅವರು ಅರ್ಜುನ್ ರೀತಿ ಹಿಂದಿದ್ದಾರೆ.